ಶ್ರೀಗಳವರು ಗದ್ದಿಗಸ್ಥರಾದ ಸ್ಥಳದಲ್ಲಿ ಅವರ ನೆನಪನ್ನು ಶಾಶ್ವತ ಗೊಳಿಸಲು ಭವ್ಯ ಗದ್ದಿಗೆಯ ಕಟ್ಟಡವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ.
ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳ ಮಠ
ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು
ಬೃಹನ್ಮಠ ರಾಂಪುರ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ-577234
ಬಸವಾಪಟ್ಟಣ ಗವಿಮಠ
ಗುಂಡೇರಿ ಶಿಲಾಮಠ
ಸದ್ಭಕ್ತ ಮಹಾಶಯರೆ
ರಾಂಪುರ ಹಾಲಸ್ವಾಮಿಗಳವರ ಮಠ ಪಂಚಪೀಠಗಳಲ್ಲಿ ಒಂದಾದ ಶ್ರೀ ಕಾಶಿ ಪೀಠದ ಶಾಖಾಮಠಗಳಲ್ಲಿ ಒಂದಾಗಿದ್ದು, ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಸಿದ್ಧಿ ಪಡೆದಿರುವ ಮಠವಾಗಿದೆ. ಶತಮಾನಗಳ ಇತಿಹಾಸ ಹೊಂದಿದ ಐದು ಗುರು ಪರಂಪರೆಗಳನ್ನೊಳಗೊಂಡ ತಲೆಮಾರುಗಳ ಗುರು ಲಕ್ಷಾಂತರ ಭಕ್ತರ ದುಃಖ ದುಮ್ಮಾನಗಳನ್ನು ಪರಿಹರಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬಂದಿದೆ. ಸಾವಿರಾರು ಭಕ್ತರು ನಿಯಮಿತವಾಗಿ ಆಮಾವಾಸ್ಯೆ, ಹುಣ್ಣಿಮೆಗಳಂದು ಮತ್ತು ಬಿಡುವಿನ ದಿನಗಳಲ್ಲಿ ಮಠಕ್ಕೆ ಆಗಮಿಸಿ, ಸ್ವಾಮಿಗಳವರ ದರ್ಶನ, ಆಶೀರ್ವಾದ ಪಡೆಯುತ್ತಾ ಬಂದಿದ್ದಾರೆ. ಹಿಂದಿನ ಎಲ್ಲಾ ಗುರುವರ್ಯರು ಭಕ್ತರಿಗೆ ಆಶೀರ್ವಾದಗಳ ಜೊತೆಗೆ ಹಲವಾರು ರೋಗ-ರುಜಿನಗಳಿಗೆ ಆಯುರ್ವೇದದ ಔಷಧಗಳನ್ನು ನೀಡುತ್ತಾ, ಕೇವಲ ದೇಹದ ಖಾಯಿಲೆಗಳನ್ನಲ್ಲದೆ ಮನಸ್ಸಿನ ವ್ಯಾಧಿಗಳನ್ನೂ ದೂರಮಾಡಿದ್ದಾರೆ. ಬರುವ ಭಕ್ತರಿಗೆ ತೀರ್ಥ-ಪ್ರಸಾದಗಳ ಜೊತೆಗೆ ನಿರಂತರ ದಾಸೋಹ ವ್ಯವಸ್ಥೆಯೂ ಶ್ರೀ ಮಠದಲ್ಲಿದೆ. ಶ್ರೀಮಠದ ವತಿಯಿಂದ ವ್ಯವಸ್ಥಿತ ಗೋಶಾಲೆ ನಡೆಸಲ್ಪಡುತ್ತಿದ್ದು, ನೂರಾರು ಗೋವುಗಳ ಆಶ್ರಯ ತಾಣವಾಗಿದೆ. ಪ್ರತಿವರ್ಷ ರಥೋತ್ಸವ ನಡೆಯುತ್ತಿದ್ದು, 50 ಸಾವಿರಕ್ಕೂ ಮಿಕ್ಕಿ ಭಕ್ತರು ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಚಿಕ್ಕ ಮಕ್ಕಳ ಜವಳ ಕಾರ್ಯ (ಚೌಲ ಸಂಸ್ಕಾರ), ಸಾಮೂಹಿಕ ವಿವಾಹ ಮತ್ತು ವಟುಗಳಿಗೆ ದೀಕ್ಷಾ ಕಾರ್ಯ ಕೂಡಾ ನಡೆಯುತ್ತಿದೆ.
ಶ್ರೀ ಮಠದ 5ನೇ ಪೀಠಾಧಿಪತಿಗಳಾಗಿ ಸದ್ಗುರುಗಳು ಸಕಲ ಭಕ್ತರಿಗೆ ಮಾರ್ಗದರ್ಶನ ನೀಡಿ, ಅವರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಿ, ಭಕ್ತರ ಕಾಮಧೇನು
ಎಂದು ಹೆಸರಾದವರು ಶ್ರೀ ಷ.ಬ್ರ ವಿಶ್ವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು, 1996ರಲ್ಲಿ ಶ್ರೀ
ಹಾಲಸ್ವಾಮಿ ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡ ಮೇಲೆ ಕೇವಲ 25 ವರ್ಷಗಳಲ್ಲಿ ಶ್ರೀಮಠದ ವ್ಯಾಪ್ತಿ, ಕೀರ್ತಿಯನ್ನು ಹಲವಾರು ಜಿಲ್ಲೆಗಳಿಗೆ ವಿಸ್ತರಿಸಿದರು. ತಮ್ಮ ತಪಸ್ಸು, ಅನುಷ್ಠಾನಗಳಿಂದ ಭಕ್ತರ ಮನೆಗಳಲ್ಲಿ, ಗ್ರಾಮಗಳಲ್ಲಿ ಪೂಜೆಗಳನ್ನು ಕೈಗೊಂಡು ಅವರ ಮನೆ-ಗ್ರಾಮಗಳನ್ನು ಪಾವನಗೊಳಿಸಿದರು. ದೇವಾಲಯಗಳ ಜೀರ್ಣೋದ್ಧಾರ, ಪ್ರವೇಶ, ಕಳಶ ಸ್ಥಾಪನೆಗಳಂತಹ ವಿಧಿ ವಿಧಾನಗಳನ್ನು ಹಲವಾರು ಕಡೆ ನಡೆಸಿಕೊಟ್ಟಿದ್ದಾರೆ. ಇಂತಹ ಕಾರ್ಯಗಳಿಗೆ ಶ್ರೀಗಳ ದಿನಾಂಕವನ್ನು ತಿಂಗಳುಗಟ್ಟಲೇ ಕಾಯುತ್ತಿದ್ದುದೂ ಉಂಟು. ಭಕ್ತರ ಮನೆಯ ಸುಖ-ದುಃಖಗಳಿಗೆ ಹಾಗೂ ಸಮಾಜದ ಸಮಸ್ಯೆಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುತ್ತಿದ್ದ ಹೃದಯವಂತ ಶ್ರೀಗಳು ಅಕಾಲಿಕವಾಗಿ ನಮ್ಮನ್ನಗಲಿದ್ದು ಎಲ್ಲರಿಗೂ ಬರಸಿಡಿಲಿನಂತೆ ಎರಗಿದೆ. ಇಡೀ ಸಮಾಜಕ್ಕೆ ಅವರ ಮಾರ್ಗದರ್ಶನವಿತ್ತು. ಇಂತಹ ಶ್ರೀ ಗುರುಗಳನ್ನು ಕಳೆದುಕೊಂಡು ನಮ್ಮಿ ಸಮಾಜ ಅನಾಥವಾಗಿದೆ.
ಶ್ರೀ ಷ||ಬ್ರ|| ಶ್ರೀ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು ಕಂಡ ಇನ್ನು ಕನಸು ನನಸು ಮಾಡುವಂತಹ ಮತ್ತು ಅವರು ಆರಂಭ ಮಾಡಿದ್ದ ಕಾರ್ಯಗಳನ್ನು ಮುಗಿಸುವಂತಹ ಹೊಣೆಗಾರಿಕೆ ಅವರ ಪ್ರಿಯ ಭಕ್ತ ಸಮೂಹದ ಮೇಲಿದೆ. ಅಂತೆಯೇ, ಶ್ರೀಗಳವರು ಗದ್ದಿಗಸ್ಥರಾದ ಸ್ಥಳದಲ್ಲಿ ಅವರ ನೆನಪನ್ನು ಶಾಶ್ವತ ಗೊಳಿಸಲು ಭವ್ಯ ಗದ್ದಿಗೆಯ ಕಟ್ಟಡವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ. ಎಲ್ಲೆಡೆ ಇರುವ ಭಕ್ತ ಸಮೂಹ ಇದನ್ನು ಸಾಕಾರಗೊಳಿಸಬೇಕಾಗಿದೆ.
ಇದಕ್ಕಾಗಿ ಸದ್ಭಕ್ತರೆಲ್ಲರೂ ತನು-ಮನ-ಧನಗಳಿಂದ ಉದಾರವಾಗಿ ಸಹಾಯ ಮಾಡಬೇಕೆಂದು ಪ್ರಾರ್ಥನೆ.
ವಂದನೆಗಳು
ಶ್ರೀಗಳ ಕರ್ತೃಗದ್ದುಗೆ ನಿರ್ಮಾಣ ಸಮಿತಿ