![]() |
ಭಾನುವಾರ , ಡಿಸೆಂಬರ್ 5, 2010
|
ಜಾಗೃತಿ ಮೂಡಿಸುವ ಶಿವಯೋಗಾನುಷ್ಠಾನ
ಎನ್.ವಿ. ರಮೇಶ್
ಹಾಲಸ್ವಾಮಿ ಗವಿಮಠದಲ್ಲಿ ನಾಲ್ಕು ದಶಕಗಳಿಂದ ಪ್ರತಿವರ್ಷ ಕಾರ್ತೀಕ ಮಾಸದಲ್ಲಿ 21 ದಿನಗಳ ಕಾಲ ನಡೆಯುವ ಶಿವಯೋಗಾನುಷ್ಠಾನ ಕಾರ್ಯಕ್ರಮ ಸಾಮಾಜಿಕ ಜಾಗೃತಿಯನ್ನು ಉಂಟುಮಾಡುವಲ್ಲಿ ಮಹತ್ತರ ಪಾತ್ರವಹಿಸುತ್ತಾ ಬಂದಿದೆ.
ರಾಂಪುರ ಬೃಹನ್ಮಠದ ಮೂಲ ಮಠವಾದ ಇಲ್ಲಿನ ಗವಿಮಠದಲ್ಲಿ 1973ರಲ್ಲಿ ಹಿರಿಯ ಪೀಠಾಧೀಶ ವಿಶ್ವಾರಾಧ್ಯ ಸ್ವಾಮಿಗಳು ಆರಂಭಿಸಿದ ಶಿವಯೋಗಾನುಷ್ಠಾನ ಕಾರ್ಯಕ್ರಮ ಕೇವಲ ಧಾರ್ಮಿಕ ಆಚರಣೆಗೆ ಮಾತ್ರ ಮೀಸಲಾಗದೇ, ಸಾಮಾಜಿಕ ಸಮಾನತೆ, ಬೌದ್ಧಿಕ ಕ್ರಾಂತಿಯೊಂದಿಗೆ ನಾಡಿನ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿದು ಜಾಗೃತಿಯನ್ನು ಮೂಡಿಸುತ್ತಿದೆ.
ಕಾರ್ಯಕ್ರಮದ ಅಂಗವಾಗಿ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿಯವರು 21 ದಿನಗಳ ಕಾಲ ಉಪವಾಸ ವ್ರತದಿಂದ ಪ್ರತಿನಿತ್ಯ ಬ್ರಾಹ್ಮೀ ಮುಹೂರ್ತದಿಂದ ಸತತ 12 ಗಂಟೆಗಳ ಶಿವಧ್ಯಾನ ನಡೆಸಿ, ಸಂಜೆ 7ಕ್ಕೆ ಸರಿಯಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ರಾತ್ರಿ 11ಕ್ಕೆ ಪುರಾಣ ಪ್ರವಚನ, ನಾಡಿನ ಪ್ರಸಿದ್ಧ ವಿದ್ವಾಂಸರು ಸಾಹಿತಿಗಳಿಂದ ಉಪನ್ಯಾಸ, ಜಾನಪದ ಮತ್ತು ಸುಗಮ ಸಂಗೀತ ಮುಂತಾದವುಗಳ ನಂತರ ಆಶೀರ್ವಚನ ನೀಡುತ್ತಾರೆ. ಅನುಷ್ಠಾನದಲ್ಲಿ ಮೂರುದಿನ ಮಹಿಳೆಯರಿಗಾಗಿ ಕಾರ್ಯಕ್ರಮವನ್ನು ಮೀಸಲಿರುತ್ತದೆ.
ವರ್ಷದ ಹನ್ನೆರಡು ತಿಂಗಳು ನಡೆಯುವ ಅನ್ನ ದಾಸೋಹ ಈ ಕಾರ್ಯಕ್ರಮದಲ್ಲಿ ವಿಶೇಷತೆ ಪಡೆದಿರುತ್ತದೆ. ಅನುಷ್ಠಾನದ ಅಂಗವಾಗಿ ನಾಡಿನ ಕಲಾವಿದರು, ಸಮಾಜಸೇವಕರಿಗೆ ಪುರಸ್ಕಾರ, ಕೊನೆಯದಿನ ಸಮಾಜದ ಎಲ್ಲಾ ವರ್ಗದವರನ್ನು ಒಳಗೊಂಡಂತೆ ಉಚಿತ ಸಾಮೂಹಿಕ ವಿವಾಹದ ಮೂಲಕ ಸರಳ ವಿವಾಹಕ್ಕೆ ಮಾದರಿ ಆಗುತ್ತಿದೆ. ಇದರಲ್ಲಿ ವಧೂವರರಿಗೆ ಮಾಂಗಲ್ಯ ಮತ್ತು ಬಟ್ಟೆಯ ದಾನವೂ ಇರುತ್ತದೆ. ನಂತರದಲ್ಲಿ ನಡೆಯುವ ಪ್ರಮುಖ ಆಕರ್ಷಣೆ ಕುಂಬಾಭಿಷೇಕ. ಇದಕ್ಕಾಗಿ ಸಾವಿರಾರು ಜನರನ್ನು ಒಳಗೊಂಡ ಕುಂಬ ಮೇಳ ಆಗಮಿಸಿದ ಭಕ್ತರಲ್ಲಿ ಭಕ್ತಿಯ ಮಹಾಪೂರವನ್ನೇ ಹರಿಸುತ್ತದೆ.
ಜಾತಿ ಭೇದ, ಮೇಲು ಕೀಳು ಭಾವನೆಗಳನ್ನು ಎಣಿಸದೇ ಎಲ್ಲರನ್ನೂ ಒಳಗೊಂಡು ನಡೆಯುವ ಈ ಕಾರ್ಯಕ್ರಮ ವರ್ಷ ವರ್ಷಕ್ಕೆ ಮೆರುಗನ್ನು ಪಡೆಯುತ್ತಿದೆ. ಸ್ಥಳೀಯ ಕಲಾವಿದರನ್ನು ಒಳಗೊಂಡ ಕಲಾ ಬಳಗವನ್ನು ಸ್ವಾಮೀಜಿಯವರು ಬೆಳೆಸಿ ಪೋಷಿಸುತ್ತಿದ್ದಾರೆ. ಸಮಾಜದ ಉದ್ಧಾರವೇ ಮಠದ ಧ್ಯೇಯ. ಅದನ್ನು ಸಫಲಗೊಳಿಸುವಲ್ಲಿ ಹಿರಿಯ ಶ್ರೀಗಳಾದ ವಿಶ್ವಾರಾಧ್ಯ ಸ್ವಾಮಿಗಳ ಮಾರ್ಗದರ್ಶನ ಮತ್ತು ಜನತೆಯ ಸಹಕಾರ ನಮಗೆ ಮುಖ್ಯ ಎಂದು ವಿಶ್ವೇಶ್ವರ ಸ್ವಾಮೀಜಿ ನುಡಿಯುತ್ತಾರೆ.